Wednesday, July 1, 2009

ಸಾರ್ಥಕತೆ

ನಗುವದೆಲ್ಲ ಹೂವಿಗಿರಲಿ
ಭೂಮಿತಾಯಿ ನಲಿಯಲಿ,
ನೋವದೆಲ್ಲ ಕವಿಗೆ ಇರಲಿ
ನೂರು ಕವಿತೆ ಅರಳಲಿ.

ಬೆವರ ಹನಿಯು ರೈತನಾಸ್ತಿ
ಅನ್ನ ನಮಗೆ ಕೊಡಲಿ.
ನಿನ್ನ ವರವು ತಾಯಿಗಿರಲಿ
ಮಡಿಲ ಕಂದ ನಗಲಿ.

ಸೋಲು ಎಂದೂ ಮನಸಿಗಿರಲಿ
ಒಲವು ಅರಳುತಿರಲಿ,
ಧರ್ಮ ಬಾಳನಾಳುತಿರಲಿ
ನೀತಿ ತಪ್ಪದಿರಲಿ.

ಶಕ್ತಿ ಯೋಧನಲ್ಲಿ ಇರಲಿ
ವೈರಿ ಉಳಿಯದಿರಲಿ,
ಗೆಲುವು ಎಂದೂ ಸತ್ಯಕಿರಲಿ
ಧರ್ಮ ಅಳಿಯದಿರಲಿ.
ಮತ್ಸರ

ನೆರಳ ಕೊಡುವವು ಎಲ್ಲ ಮರಗಳು
ಪೂಜೆ ಮಾತ್ರ ಅರಳಿಗೆ;
ದುಡಿದು ದಣಿದವು ಕಾಲು ಕೈಗಳು
ಹಾರ ಮಾತ್ರ ಕೊರಳಿಗೆ.

ಹಾಡು ಕೋಗಿಲೆ ಎನ್ನಲೇಕೆ?
ಹಾದಲಾರರೆ ಇತರರು?
ಅಳಿಲ ಸೇವೆಯ ನೆನೆದ ರಾಮ
ದುಡಿಯಲಿಲ್ಲವೇ ಕಪಿಗಳು?

ಕಾಲ ಕಾಲಕೆ ಇಳಿವ ಮಳೆಯ
ನೆನೆಸಿತೆಂದು ಶಪಿಸುವೆ
ಮುನಿದು ಮತ್ತೆ ಬಾರದಿದ್ದರೆ
ಮತ್ತದಕ್ಕೆ ತಪಿಸುವೆ

ಗಿಡ ಮರಗಳಿಗೆ, ಹಾಡು ಹಕ್ಕಿಗೆ
ಇಲ್ಲಧಂಥ ಮತ್ಸರ
ನಮಗೆ ನೀಡಿದೆ ಏಕೋ ದೇವ?
ಕೊಂಚ ಬದಲಿಸಲಾರೆಯಾ?