Wednesday, October 7, 2009

ಬಾಗಿಲ ಒಳಗೆ

ಒಳಗೆ ದೇವನಿದ್ದಾನೆಂದು ಬಾಗಿಲಿಗೇ ಕೈ ಮುಗಿದೆ.
ನಷ್ಟವಾಯಿತು ಕಷ್ಟ, ಮತ್ತೆ ಬಂದು
ಬಾಗಿಲಿಗೇ ಕೈ ಮುಗಿದೆ.

ಒಂದು ಕುತೂಹಲ ಮೂಡಿತ್ತು ಮನದಲ್ಲಿ,
ಒಂದೊಮ್ಮೆ ಬಾಗಿಲನು ತೆರೆದೆ;
ಮನದಲ್ಲಿ ಅಳುಕಿತ್ತು, ಭಕ್ತಿಯಾ ಬೆಳಕಿತ್ತು,
ಅನುಮಾನದ ಕತ್ತಲೆಯ ಕಳೆದೆ.

ಒಳಗೊಂಡು ಕೊಳವಿತ್ತು, ತಿಳಿ ನೀರ ಕಲ್ಯಾಣಿ,
ಚಂದ್ರನಿಗೆ ಹಿಡಿದಂತೆ ಕನ್ನಡಿ;
ಬುವಿಯು ಬೆಳಕನ್ನು ಬೀಳ್ಕೊಡುತ್ತಿತ್ತು,
ನೆರಳು ಅಳಿಸಿತ್ತು ನನ್ನಡಿ.

ಒಳಗೆ ಕತ್ತಲೆ ಎಲ್ಲ, ದೀಪ ಹಚ್ಚುವರಿಲ್ಲ
ಹೊತ್ತಾಯಿತೇನೋ ನಾ ಬಂದದ್ದು,
ಎನಿಸುವಷ್ಟರಲ್ಲಿ ತಾರೆಗಳು ಮಿನುಗಿತ್ತು,
ತಿಳಿನೀರದ ಇಮ್ಮಡಿಗೊಳಿಸಿತ್ತು.

ಹಗಲೆಲ್ಲ ಸೃಷ್ಟಿಯ ಬಿಡಿಸಿದ ಕುಂಚ
ತಂಗುವ ಸಂಧ್ಯಾ ಸಮಯ,
ನೀರಲಿ ತೊಳೆದು ಬಾನಿಗೊರೆಸಿದ ಹಾಗೆ
ಮೋಡವನು ಕಂಡಿತ್ತು ಹೃದಯ.

ಗುಡಿಯ ಕಲ್ಗಂಬಗಳು ಹುಣ್ಣಿಮೆಯ ಬೆಳಕಿನಲಿ
ಬೆಳ್ಳಿ ದೀಪದ ಕಂಬದಂತಿತ್ತು,
ದೇಗುಲದ ಒಳಗಲ್ಲಿ ಎಲ್ಲವೂ ಪ್ರಶಾಂತ,
ನನ್ನ ಮನ ಒಂದೇ ನುಡಿದಿತ್ತು...

No comments:

Post a Comment